Showing posts with label ಧರ್ಮರಾಯ. Show all posts
Showing posts with label ಧರ್ಮರಾಯ. Show all posts

Friday, July 22, 2011

ಪಾಂಡವರ ಧರ್ಮದ ಮಧ್ಯೆ ದ್ರೌಪದಿ ವಸ್ತ್ರಾಪಹರಣ

ಬಹಳ ದಿನಗಳ ಹಿಂದೆ ಒಂದು ಪ್ರಶ್ನೆಯನ್ನು ಕೇಳಿದ್ದೆ. ಧರ್ಮರಾಯನಿಗೆ ಶಿಕ್ಷೆ ಎನ್ನುವ ಶೀರ್ಷಿಕೆಯಡಿಯಲ್ಲಿ. ಆ ಪ್ರಶ್ನೆಗೆ ಉತ್ತರಿಸುತ್ತ ಹೊಸಮನೆಯವರು, "ದ್ರೌಪದಿ ಕೂಡ ಜೂಜಿನಲ್ಲಿ ಅವಳನ್ನು ಒತ್ತೆ ಇಟ್ಟಿದ್ದಕ್ಕೆ ಆಕ್ಷೆಪಿಸಲಿಲ್ಲ. ಆದರೆ ತನ್ನನ್ನು ತಾನು ಸೋತ ನಂತರ ಧರ್ಮರಾಯ ಅವಳನ್ನು ಪಣವಾಗಿ ಒಡ್ಡುವುದು ಯಾವ ಧರ್ಮ ಎಂದು ಪ್ರಶ್ನಿಸುತ್ತಾಳೆ" ಎಂದು ಹೇಳಿದ್ದಾರೆ.
ಮೊನ್ನೆ ಮೊನ್ನೆ, ಕುಮಾರವ್ಯಾಸ ಕಥಾಮಂಜರಿಯ ಸಭಾಪರ್ವವನ್ನು ಓದಿ ಮುಗಿಸಿದೆ. ದ್ರೌಪದಿ ವಸ್ತ್ರಾಪಹರಣದ ಸನ್ನಿವೇಶವನ್ನು ಓದಿದಾಗ ಅಂದಿನ ಪ್ರಶ್ನೆ ಮತ್ತೆ ಉದ್ಭವಿಸಿತು. "ತನ್ನನ್ನು ತಾನು ಸೋತ ನಂತರ ಹೇಗೆ ಪರರನ್ನು ಜೂಜಿನಲ್ಲಿ ಒತ್ತೆ ಇಡಲು ಸಾಧ್ಯ? ಇದು ಧರ್ಮವೇ?" ಎಂದು ಕೇಳಿದಾಗ, ಭೀಷ್ಮಾದಿಗಳನ್ನೋಳಗೊಂಡು, ಆಸ್ಥಾನದಲ್ಲಿದ್ದ ಯಾರೂ ಮಾತನಾಡುವುದಿಲ್ಲ. ಇದು ಏಕೆಂದು ನನಗೆ ಗೊಂದಲವಾಯಿತು. ಯೋಚಿಸಿದಾಗ ಒಂದು ಸಾಧ್ಯತೆ ಗಮನಕ್ಕೆ ಬಂತು. ಧರ್ಮರಾಯ ಸೋತಾಗಿತ್ತು. ಕೌರವನ ಕಿಂಕರನಾಗಿಯಾಗಿತ್ತು. ಆ ನಂತರ ಗೆದ್ದವರು ಹೇಳಿದಂತೆ ಅವನು ಕೇಳುವುದು ಧರ್ಮ. ಅವರು ವಡ್ಡು ಏನೆಂದು ಕೇಳಿದರು. ಇವನು ಹೇಳಿದ. ಇವನು ಹೇಳಿದ್ದನ್ನು ಅವರು ಒಪ್ಪಿದರು. ಹಾಗಾಗಿ ಇಲ್ಲಿ ಧರ್ಮದ ಉಲ್ಲಂಘನೆ ಆಗಿಲ್ಲ ಅನ್ನಿಸಿತು.
ಇನ್ನು ಪ್ರಾಣಕ್ಕಿಂತ ಮಾನ ದೊಡ್ಡದು ಎಂದು ಎಷ್ಟೋ ಕಡೆ ಓದುತ್ತೇವೆ, ಕೇಳುತ್ತೇವೆ. ತಮ್ಮ ಪಟ್ಟದರಸಿಯ ಮಾನಕ್ಕೆ ಸಂಚಕಾರ ಬಂದಾಗಲೂ ಧರ್ಮ ಎನ್ನುತ್ತಾ, ಸುಮ್ಮನಿದ್ದ ಧರ್ಮರಾಯಾದಿ ಪಾಂಡವರು ಮಾಡಿದ್ದು ಸರಿಯೇ? ಧರ್ಮ, ಹಾಗಾದರೆ ಮಾನಕ್ಕಿಂತಲೂ ಉನ್ನತವಾದದ್ದೇ! ಇಂದಿಗೂ?!

Saturday, June 6, 2009

ಧರ್ಮರಾಯನಿಗೆ ಶಿಕ್ಷೆ

ಯಮಧರ್ಮನ ವರಪ್ರಸಾದದಿಂದ ಜನಿಸಿದ ಯುಧಿಷ್ಠಿರ ತನ್ನ ಧರ್ಮ ಪಾಲನೆಯಿಂದ ಧರ್ಮರಾಯನೆಂದೇ ಕರೆಸಿಕೊಂಡದ್ದು ನಮಗೆಲ್ಲ ತಿಳಿದ ವಿಷಯ. ಆದರೂ ಅಶ್ವತ್ಥಾನ ಮೃತಹೊಂದಿದ ಎಂದು ಹೇಳಿದ್ದಕ್ಕೆ, ಧರ್ಮರಾಯನಿಗೆ ಒಂದು ದಿನ ನರಕವನ್ನು ನೋಡುವ ಶಿಕ್ಷೆ ವಿದಿಸಲಾಯಿತು ಎಂದು ಹೇಳುತ್ತಾರೆ. ಆ ಹೆಸರಿನ ಆನೆ ಒಂದು ನಿಜವಾಗಿ ಸತ್ತಿದ್ದರೂ, ಅದನ್ನು ಹೇಳಿದ ರೀತಿ ದ್ರೋಣಾಚಾರ್ಯರ ಮಗ ಅಶ್ವತ್ಥಾನನ ಮರಣದ ವಾರ್ತೆಯಂತಿತ್ತು. ಹೀಗಿದ್ದಾಗ ನನಗೊಂದು ಸಂದೇಹ. ಪಾಂಡವರ ಕೌರವರ ಜೋಜಿನಲ್ಲಿ ದ್ರೌಪದಿಯನ್ನೇ ಜೂಜಿಗಿಟ್ಟಿದ್ದಕ್ಕೆ, ಯಾಕೆ ಧರ್ಮರಾಯನಿಗೆ ಏನೂ ಶಿಕ್ಷೆಯ ಪ್ರಸ್ತಾಪ ಆಗಿಲ್ಲ?

/* ಈ ಪ್ರಶ್ನೆಗೆ ಉತ್ತರಿಸಲು ಎಲ್ಲರಿಗೂ ಆಹ್ವಾನವಿದೆ. */