Showing posts with label ಶ್ರೀರಂಗಪಟ್ಟಣ. Show all posts
Showing posts with label ಶ್ರೀರಂಗಪಟ್ಟಣ. Show all posts

Friday, March 25, 2011

ಶ್ರೀರಂಗಪಟ್ಟಣದ ಭಟ್ಟರ "ಮಂತ್ರ"

ಕಳೆದ ವಾರ ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ವಿ.ಆ ಪ್ರವಾಸದ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ. ಆದರೆ ಅಲ್ಲಿ ನಡೆದ ಒಂದು ಪ್ರಸಂಗದ ಬಗ್ಗೆ ನಾನೀಗ ಬರೆಯಬೇಕಾಗಿದೆ.

ನಾನು ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡದೇ ಬರೇ ದೇವಸ್ಥಾನ ನೋಡಿಕೊಂಡು ಬಂದದ್ದು ಬೇಕಷ್ಟಿದೆ. ನನಗೆ ದೇವಾಲಯದ ಶಿಲ್ಪಿ ಕಲೆಗಳೇ ಬಹಳ ಮೆಚ್ಚುಗೆಯಾಗುತ್ತವೆ. ಮಧುರೈಗೆ ಹೋಗಿ ಮೀನಾಕ್ಷಿ ದೇವಸ್ಥಾನದ ಒಳಭಾಗದಲ್ಲೆಲ್ಲ ತಿರುಗಾಡಿ ಮೀನಾಕ್ಷಿ ಮೂರ್ತಿ ನೋಡದೆ ಬಂದಿದ್ದೇನೆ. ಕನ್ಯಾಕುಮಾರಿಗೆ ಹೋದಾಗ, ಅಲ್ಲಿನ ದೇವಸ್ಥಾನಕ್ಕೆ ಹೋಗಿ, ಕನ್ಯಾಕುಮಾರಿಯ ದರ್ಶನವನ್ನೇ ಮಾಡದೆ ಬಂದಿದ್ದೇನೆ. ಸರಿ, ಮತ್ತೆ ಮತ್ತೆ ಹೀಗಾಗುವುದು ಬೇಡ ಈ ಸಲ ಎಷ್ಟು ಸಾಧ್ಯವೋ ಅಷ್ಟು ಒಳಗೆ ಹೋಗಬೇಕು ಅಂದು ನಿರ್ಧರಿಸಿದೆ. ದೇವಸ್ಥಾನದಲ್ಲಿ ಸುಮಾರು ಒಳಭಾಗದವೆರೆಗೂ ಸಾರ್ವಜನಿಕರಿಗೆ ಪ್ರವೇಶವಿದೆ. ಪವಡಿಸಿರುವ ರಂಗನಾಥ ಸ್ವಾಮಿ ವಿಗ್ರಹವಿರುವ ಗುಡಿ (ಗರ್ಭ ಗುಡಿ) ಗೆ ಮಾತ್ರ ಪ್ರವೇಶವಿಲ್ಲ. ಆದರೆ ತುಂಬಾ ಹತ್ತಿರದವೆರೆಗೂ ಹೋಗಬಹುದು.

ಹಾಗೆ ಮೊನ್ನೆ ಹೋಗಿ ಸಾಲಿನಲ್ಲಿ ನಿಂತಿದ್ದೆವು. ನಮ್ಮ ಮುಂದೆ ಇದ್ದವ ಒಬ್ಬ ಮೊಬೈಲ್ ನಿಂದ ಫೋಟೋ ಕ್ಲಿಕ್ಕಿಸಿದ. ಫೋಟೋ ತೆಗೆಯುವುದನ್ನು ನಿಷೇಧಿಸಿದೆ ಎಂಬ ಫಲಕ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಅಲ್ಲಿ ಎಲ್ಲ ಕಡೆ ಹಾಕಲಾಗಿದೆ. ಆದುದರಿಂದ ಫೋಟೋ ತೆಗೆದವನದ್ದೆ ತಪ್ಪು ಎಂದು ಯಾರಾದರು ಹೇಳಬಹುದು. ಆದರೆ ಅಲ್ಲಿಯ ಭಟ್ಟ (ಅರ್ಚಕರು ಎನ್ನದೆ ಯಾಕೆ ಭಟ್ಟ ಅಂತ ಕೆರೆಯುತ್ತಿದ್ದೇನೆ ಎಂದು ಕ್ರಮೇಣ ನಿಮಗೆ ತಿಳಿಯುತ್ತದೆ) ಫೋಟೋ ತೆಗೆದವನ ಹತ್ತಿರ ಬಂದ. ಬಂದು ಫೋಟೋ ಅಳಿಸು ಎಂದು ಆದೇಶಿಸಿದ. ಇವನು ಆಮೇಲೆ ಅಳಿಸುತ್ತೇನೆ ಎಂದ. ಭಟ್ಟ ಈಗಲೇ ಎನ್ನುವುದು ಇವನು ಆಮೇಲೆ ಎನ್ನುವುದು, ಹೀಗೆ ಸಾಗಿತು ಅವರ ಮಾತು. ಮಾತಿಗೆ ಮಾತು ಸೇರಿ ಕೈ ಕೈ ಮಿಲಾಯಿಸುವ ಹಂತವೂ ಬಂತು. ಮಿಲಾಯಿಸಿದ್ದೂ ಆಯಿತು! ನಾವೆಲ್ಲ ಸಾಲಿನಲ್ಲಿ ಕಾಯುತ್ತ ಇದ್ದೇವೆ. ಆಮೇಲೆ ಆ ಭಟ್ಟ, ಹೊಡೆದಾಡಿ ಮೊಬೈಲ್ ಕಸಿದುಕೊಂಡೇ ಬಿಟ್ಟ! ಅದನ್ನು ಎತ್ತಿ ಬಿಸಾಕಿ ಮುರಿದದ್ದೂ ಆಯಿತು. ಅಲ್ಲೆಲ್ಲ ಸೆಕ್ಯೂರಿಟಿಯವರು ಇದ್ದಾಗ ಈ ಭಟ್ಟನಿಗೆ ಈ ರೀತಿ ಹೊಡೆದಾಡುವುದು ಬೇಕಿರಲಿಲ್ಲ ಎಂದು ನಾವು ಮಾತನಾಡಿಕೊಳ್ಳುತ್ತಿರಬೇಕಾದರೆ, ಆ ಭಟ್ಟ ಕೈಯಲ್ಲಿ ಆರತಿ-ಕುಂಕುಮದ ತಟ್ಟೆ ಹಿಡಿದುಕೊಂಡು, ಗರ್ಭ ಗುಡಿಯ ಬಾಗಿಲಲ್ಲಿ ನಿಂತು, "ಬೋಳಿಮಗನೆ, ಫೋಟೋ ತೆಗಿಬಾರ್ದು ಅಂತ ಗೊತ್ತಾಗಲ್ವ ನಿಂಗೆ? ಬೋಳಿಮಗನೆ, ಕೋಣ ಬೆಳೆದಂಗೆ ಬೆಳೆದಿದ್ದಿಯ!" ಎಂದು ಕೆಳಮಟ್ಟದ ಶಬ್ದ ಬಳಸುವುದೇ?! ನಮಗೋ ಭಕ್ತಿ ಎಲ್ಲ ಹೊರಟು ಹೋಗಿ ನಮಸ್ಕರಿಸಲೂ ಮನಸ್ಸು ಬರಲಿಲ್ಲ. ಆ ಭಟ್ಟನ ಭಾಷೆಗೆ ಬೈಯುತ್ತ ಹೊರಬಂದೆವು.